Sunday, January 14, 2018

Dr Kiran Kumar, Chairman ISRO Interview Prajavani

http://www.prajavani.net/news/article/2018/01/14/547078.html
ವಾರದ ಸಂದರ್ಶನ: ಡಾ. ಕಿರಣ್ ಕುಮಾರ್
ಐದು ವರ್ಷಗಳಲ್ಲಿ 60 ಮಹತ್ವದ ಉಡಾವಣೆ ನಿರೀಕ್ಷೆ’
ಶಿವಾನಂದ ಕಣವಿ
14 Jan, 2018
ನಿವೃತ್ತಿಗೆ ಎರಡು ದಿನಗಳ ಹಿಂದೆ ಇಸ್ರೊ ನಡೆಸಿದ್ದ 31 ಉಪಗ್ರಹಗಳ ಉಡಾವಣೆಯಲ್ಲಿ ಕಿರಣ್‌ ಅವರು ಪ್ರಮುಖ ಪಾತ್ರವಹಿಸಿದ್ದರು. ಉಡಾವಣೆ ಯಶಸ್ವಿಯಾದ ಬಳಿಕ ಅವರು ಇಸ್ರೊದ ಮುಂದಿನ ಯೋಜನೆಗಳು, ಹಾಗೂ ಸಂಸ್ಥೆಯಲ್ಲಿ ತಮ್ಮ ಪಯಣದ ಬಗ್ಗೆ ಮಾತನಾಡಿದ್ದಾರೆ.


http://www.prajavani.net/news/images/camera.png
ಡಾ. ಕಿರಣ್‌ ಕುಮಾರ್‌
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೊ)ದೀರ್ಘ ಕಾಲ ಕಾರ್ಯ ನಿರ್ವಹಿಸಿ, ಅದರ ಅಧ್ಯಕ್ಷರೂ ಆಗಿದ್ದ ಕನ್ನಡಿಗ, ಡಾ. ಕಿರಣ್‌ ಕುಮಾರ್‌ ಅವರು ಈಚೆಗೆ ನಿವೃತ್ತರಾಗಿದ್ದಾರೆ. ಅವರ ನಿವೃತ್ತಿಗೂ ಎರಡು ದಿನಗಳ ಹಿಂದೆ ಇಸ್ರೊ ನಡೆಸಿದ್ದ 13 ಉಪಗ್ರಹಗಳ ಉಡಾವಣೆಯಲ್ಲಿ ಕಿರಣ್‌ ಅವರು ಪ್ರಮುಖ ಪಾತ್ರವಹಿಸಿದ್ದರು. ಉಡಾವಣೆ ಯಶಸ್ವಿಯಾದ ಬಳಿಕ ಅವರು ಇಸ್ರೊದ ಮುಂದಿನ ಯೋಜನೆಗಳು, ಹಾಗೂ ಸಂಸ್ಥೆಯಲ್ಲಿ ತಮ್ಮ ಪಯಣದ ಬಗ್ಗೆ ಮಾತನಾಡಿದ್ದಾರೆ.
*   ಉಡಾವಣೆಯಲ್ಲಿ ನಿರೀಕ್ಷಣಾ ಉಪಗ್ರಹ ಕಾರ್ಟೋಸ್ಯಾಟ್‌ ಜೊತೆಗೆ 30 ಚಿಕ್ಕ ಉಪಗ್ರಹಗಳನ್ನೂ ಕಳಿಸಿದ್ದೀರಿ. ಈ ಕಾರ್ಟೋಸ್ಯಾಟ್‌ನ ನಿಖರತೆ ಎಷ್ಟು?
ಅದರ ನಿಖರತೆ ಸುಮಾರು 60 ಸೆಂ.ಮೀ. (2ಅಡಿ). ಈ ಕಾರ್ಟೋಸ್ಯಾಟ್‌ ಸಹಾಯದಿಂದ ಉದ್ದ ಅಗಲಗಳ ಜೊತೆಗೆ ಎತ್ತರವನ್ನೂ (ಮೂರನೆಯ ಆಯಾಮ–3ಡಿ)ನಾವು ಕೊಡಬಲ್ಲೆವು. ಅದಕ್ಕಾಗಿ ಒಳ್ಳೆಯ ಗುಣಮಟ್ಟದ ಚಿತ್ರಗ್ರಹಣ ಬಹು ಮುಖ್ಯ.
* ಅಮೆರಿಕ, ರಷ್ಯಾದ ನಿರೀಕ್ಷಣಾ ಉಪಗ್ರಹಗಳಿಂದ ಭೂಮಿಯ ಮೇಲಿನ ಕಾರುಗಳ ನಂಬರ್ ಪ್ಲೇಟನ್ನೂ ಓದಲು ಸಾಧ್ಯ ಅನ್ನುತ್ತಾರಲ್ಲ?
ಹೌದು, ಅದಕ್ಕಾಗಿ ಅವರು 7–8 ಟನ್‌ ಭಾರದ ಉಪಗ್ರಹಗಳನ್ನು ಕಳಿಸುತ್ತಿದ್ದರು. ಅವು ಒಂದು ರೀತಿಯಿಂದ ಭೂಮಿ ಕಡೆ ನೋಡುವ ‘ಹಬಲ್’ ದೂರದರ್ಶಕಗಳೇ ಆಗಿದ್ದವು. ಅದಕ್ಕೆ ಕನಿಷ್ಠ 2.5 ಮೀಟರ್‌ ಅಗಲದ ದೂರದರ್ಶಕ ಬೇಕು. ನಾವೀಗ 70 ಸೆಂ.ಮೀ ಸಾಧಿಸಿದ್ದೇವೆ ಮತ್ತು 1.2 ಮೀ. ದೂರದರ್ಶಕವನ್ನು ನಿರ್ಮಿಸುತ್ತಿದ್ದೇವೆ.
* ನೀವೀಗ 30 ಚಿಕ್ಕ ಉಪಗ್ರಹಗಳನ್ನೂ (28 ವಿದೇಶದವು) ಕಳಿಸಿದ್ದೀರಿ. ಅವುಗಳ ವ್ಯಾವಹಾರಿಕ ಪ್ರಯೋಜನವೇನು?
ವಿಶ್ವದಲ್ಲಿ ಈಗ ಕೆಲ ಕಂಪನಿಗಳು 200 ಚಿಕ್ಕ (10–15 ಕೆ.ಜಿ. ತೂಕದ) ಉಪಗ್ರಹಗಳ ಮಾಲೆಗಳ ಮೂಲಕ ಭೂ ನಿರೀಕ್ಷಣೆ ಮಾಡಲು ಮುಂದಾಗಿವೆ. ಅದರಂತೆ 150 ಕೆ.ಜಿ. ಭಾರದ ಉಪಗ್ರಹಗಳನ್ನು ಉಪಯೋಗಿಸಿ ಇಂಟರ್‌ನೆಟ್ ಸೇವೆ ಒದಗಿಸುವ ಯೋಜನೆಗಳೂ ಇವೆ.
* ಆದರೆ ನಾವು 4–5 ಟನ್ ಭಾರದ ಉಪಗ್ರಹಗಳೆಡೆಗೆ ಹೊರಟಿದ್ದೇವೆ...?
ಅದೂ ಬೇಕು. ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸಲು ಇಂಥ ಸಾಮರ್ಥ್ಯ ಅಗತ್ಯ. ಅದಲ್ಲದೆ ಚಿಕ್ಕ ಉಪಗ್ರಹಗಳಲ್ಲಿ ಇಷ್ಟು ಸಾಧ್ಯತೆಗಳನ್ನು ತುಂಬುವ ತಂತ್ರಜ್ಞಾನ ನಮ್ಮಲ್ಲಿ ಇಲ್ಲ ಎಂಬ ಕಾರಣಕ್ಕೆ ನಾವು ಕೈಚೆಲ್ಲಿ ಕೂರುವುದು ಸಾಧ್ಯವಿಲ್ಲ.
* ನಮ್ಮ 4 ಟನ್ ಭಾರದ ಸಂವಹನ ಉಪಗ್ರಹಗಳನ್ನು ನಮ್ಮ ರಾಕೆಟ್ಟುಗಳ ಮೂಲಕವೇ ನಾವು ಎಂದು ಉಡಾವಣೆ ಮಾಡಬಹುದು?
ಜಿಎಸ್ಎಲ್‌ವಿ ಮಾರ್ಕ್‌-3 ರಾಕೆಟ್ಅನ್ನು ಪಳಗಿಸುವವರೆಗೂ ಫ್ರಾನ್ಸ್‌ ದೇಶದ ಆರಿಯಾನ್ ರಾಕೆಟ್‌ಗಳನ್ನು ಅವಲಂಬಿಸುವುದು ಅನಿವಾರ್ಯ. ಈಗಾಗಲೇ ಒಂದು ಉಡಾವಣೆ ಯಶಸ್ವಿಯಾಗಿದೆ ಇನ್ನೂ ಕೆಲವು ಉಡಾವಣೆಗಳ ನಂತರ ನಾವೂ ಈ ಸಾಮರ್ಥ್ಯವನ್ನು ಪಡೆಯುತ್ತೇವೆ. ಅದಲ್ಲದೆ ನಾವೀಗ ಎಲೆಕ್ಟ್ರಿಕ್ ಪ್ರೊಪಲ್ಷನ್‌ನಲ್ಲೂ ಪ್ರಯೋಗಗಳನ್ನು ಮಾಡುತ್ತಿದ್ದೇವೆ. ಅದು ಯಶಸ್ವಿಯಾದರೆ 6 ಟನ್ ಉಪಗ್ರಹಗಳನ್ನು ಹಾರಿಸಲೂ ನಮ್ಮಿಂದ ಸಾಧ್ಯವಾಗಬಹುದು.
* ನಾವಿನ್ನೂ ದುಬೈ ದೇಶದ ಥುರಾಯಾ ಕಂಪನಿಯ ಸ್ಯಾಟಲೈಟ್‌ ಫೋನ್‌ಗಳನ್ನು ಬಳಸುತ್ತಿದ್ದೇವೆ. ನಮ್ಮದೇ ಸ್ಯಾಟಲೈಟ್‌ ಫೋನ್‌ ಯಾವಾಗ ಸಿದ್ಧವಾಗಬಹುದು?
ನಾವು ಮಾಡಿರುವ ಹೊಸ ಆವಿಷ್ಕಾರವೆಂದರೆ, ಸದ್ಯ ಇರುವ ನಮ್ಮ ‘ಎಸ್ ಬ್ಯಾಂಡ್‌’ ಉಪಗ್ರಹಗಳನ್ನು ಬಳಸಿಕೊಂಡೇ ಕೈಯಲ್ಲಿರುವ ಮೊಬೈಲ್ ಫೋನ್‌ಗಳನ್ನೇ ಸ್ಯಾಟಲೈಟ್‌ ಫೋನ್‌ಗಳಂತೆ ಬಳಸಬಹುದು. ದೇಶದ ಯಾವುದೇ ಕಾಡು, ಗಿರಿ ಕಂದರಗಳಿಂದ ಸಂವಹನ ನಡೆಸಬಹುದು. ಇದಕ್ಕಾಗಿ ನಾವೊಂದು ವಿಶೇಷ ಚಿಕ್ಕ ಉಪಕರಣವನ್ನೂ ಅಭಿವೃದ್ಧಿ ಪಡಿಸಿದ್ದೇವೆ. ಸದ್ಯಕ್ಕೆ ಇದು ನಮ್ಮ ಗುಪ್ತಚರ ವಿಭಾಗ ಮತ್ತು ರಕ್ಷಣಾ ಪಡೆಗಳಿಗೆ ಮಾತ್ರ ಲಭ್ಯವಿದೆ.
* ಅದೇ ತರಹ ನಮ್ಮದೇ ಜಿಪಿಎಸ್ ಉಪಗ್ರಹ ಮಾಲಿಕೆಯೂ ಸಿದ್ಧವಾಗಿದೆಯೇ?
ಹೌದು, ರಕ್ಷಣಾ ಪಡೆಗಳ ಅಗತ್ಯವನ್ನು ಗಮನದಲ್ಲಿಟ್ಟು ಹೆಚ್ಚು ನಿಖರ ಮಾಹಿತಿ ಪಡೆಯಲು ಸಾಧ್ಯವಾಗುವಂತೆ ಅದನ್ನು ರೂಪಿಸಲಾಗಿದೆ. ಸಾರ್ವಜನಿಕರಿಗೂ ಅದರ ಲಾಭ ಸಿಗಲಿದೆ.  ಅದರ ಲಾಭವನ್ನು ಜನರಿಗೆ ತಲುಪಿಸಲು ಹಲವು ಕಂಪನಿಗಳು ಮುಂದೆಬಂದಿವೆ.
* ಇಸ್ರೊದ ಮುಂದಿರುವ ಯೋಜನೆಗಳೇನು?
ಮುಂದಿನ ಐದು ವರ್ಷಗಳಲ್ಲಿ ಮಹತ್ವದ ಸುಮಾರು 60 ಉಡಾವಣೆಗಳನ್ನು ನಡೆಸುವ ಯೋಜನೆ ಇದೆ. ಅದಕ್ಕಾಗಿ ಉಪಗ್ರಹ ಮತ್ತು ರಾಕೆಟ್‌ಗಳ ನಿರ್ಮಾಣದಲ್ಲಿ ನಾವು ಕೆಲ ಖಾಸಗಿ ಕಂಪನಿಗಳನ್ನೂ ಒಳಗೂಡಿಸುವವರಿದ್ದೇವೆ. ನಮ್ಮ ಮಾರ್ಗದರ್ಶನದಲ್ಲಿ ಅವು ಕೆಲಸ ಮಾಡಲಿವೆ. ಇದರಿಂದ ನಮ್ಮ ಕ್ಷಮತೆ ಇನ್ನೂ ಹೆಚ್ಚುತ್ತದೆ. ಇದರೊಡನೆಯೇ ಸೆಮಿ ಕ್ರಯೊ ಎಂಜಿನ್, ನಮ್ಮದೇ ಶಟಲ್, ಚಂದ್ರಯಾನ–2, ಶುಕ್ರ ಗ್ರಹ ಯಾನ, ಆದಿತ್ಯ, ಇನ್ನೊಂದು ಮಂಗಳಯಾನ ಅದಲ್ಲದೇ ಈಗಿರುವ 42 ಉಪಗ್ರಹಗಳ ಸಂಖ್ಯೆಯನ್ನು 80–100ಕ್ಕೆ ಏರಿಸುವುದು... ಹೀಗೆ ಹಲವು ಯೋಜನೆಗಳಿವೆ. ಚಂದ್ರಯಾನ–2 ದಲ್ಲಿ ಚಂದ್ರನಮೇಲೆ ಇಳಿದು ಒಂದು ರೋಬೊ ವಾಹನವನ್ನು ಓಡಾಡಿಸಿ ಅಲ್ಲಿಯ ಮಣ್ಣಿನ ಪರೀಕ್ಷಣೆ ಮಾಡುವುದಿದೆ.
* ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸುವ ಪ್ರಯತ್ನ ಎಲ್ಲಿಯವರೆಗೆ ಬಂದಿದೆ?
ಅದಕ್ಕಿನ್ನೂ ಅನುಮತಿ ಸಿಕ್ಕಿಲ್ಲ. ಅದಕ್ಕೆ ಬೇಕಾದ ವಿವಿಧ ಕ್ಲಿಷ್ಟ ತಂತ್ರಜ್ಞಾನಗಳನ್ನು ನಾವು ಅಭಿವೃದ್ಧಿಪಡಿಸುತ್ತಿದ್ದೇವೆ, ಗಗನಯಾನಿಗಳನ್ನು ಭೂಮಿಗೆ ಹೇಗೆ ಸುರಕ್ಷಿತವಾಗಿ ಮರಳಿ ತರುವುದು, ಯಾನಿಗಳ ಕ್ಯಾಬಿನ್‌ ಇತ್ಯಾದಿ. ಉದಾಹರಣೆಗೆ ಗಗನಯಾನಿಗಳ ಸೂಟು ತಯಾರಾಗಿದೆ.
* ಇಸ್ರೊದಲ್ಲಿನ ನಿಮ್ಮ ವೈಯಕ್ತಿಕ ಯಾನ ಹೇಗಿತ್ತು?
ನಾನು ಇಸ್ರೊ ಸೇರಿದ್ದು 1975ರ ಆಗಸ್ಟ್‌ನಲ್ಲಿ. ಅದಕ್ಕೂ ಮೊದಲು ನಾನು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಪಿಎಚ್.ಡಿ ಮಾಡುತ್ತಿದ್ದೆ. ಆಗ ‘ಫಿಸಿಕಲ್ ಎಂಜಿನಿಯರಿಂಗ್‌’ ಎಂಬ ಹೊಸ ಬಹು ಶಾಸ್ತ್ರೀಯ ಕೋರ್ಸನ್ನು ಭೌತಶಾಸ್ತ್ರ ವಿಭಾಗ ಪ್ರಾರಂಭಿಸಿತ್ತು. ನಾನು ‘ಇಮೇಜ್‌ ಪ್ರೊಸೆಸಿಂಗ್‌’ನಲ್ಲಿ  ಡಿಜಿಟಲ್ ತಂತ್ರಜ್ಞಾನದ ಬಳಕೆಯನ್ನು ಅನ್ವೇಷಿಸುತ್ತಿದ್ದೆ. 1975ರಲ್ಲಿ ಅಹಮದಾಬಾದ್‌
ನಲ್ಲಿರುವ ಇಸ್ರೊದ ಉಪಗ್ರಹ ಅನ್ವೇಷಣಾ ಕೇಂದ್ರವನ್ನು ಸೇರಿದೆ. ಆಗ ಶುರುವಾಗಿದ್ದ ಭಾಸ್ಕರ 1 ಮತ್ತು 2 ಉಪಗ್ರಹಗಳಿಂದ ನನ್ನ ಪಯಣ ಶುರುವಾಯಿತು. ಅಂದಿನಿಂದ ಸುಮಾರು 50ಕ್ಕೂ ಹೆಚ್ಚು ಉಪಗ್ರಹಗಳ ವಿನ್ಯಾಸದಲ್ಲಿ ನನ್ನ ಕೊಡುಗೆ ಇದೆ. ಮೊದಲು ಭೂ ನಿರೀಕ್ಷಣೆ, ಆನಂತರ ಆಪ್ಟಿಕಲ್, ಮೈಕ್ರೋ ವೇವ್ ಇತ್ಯಾದಿ ಇಮೇಜ್ ಪ್ರೊಸೆಸಿಂಗ್‌, ಕೊನೆಗೆ ಸಂವಹನ ಉಪಗ್ರಹಗಳು... ಹೀಗೆ ಇಸ್ರೊ ಯಾನ ಅವಿಸ್ಮರಣೀಯ.
ಶಿವಾನಂದ ಕಣವಿಯವರು ನಿಯಾಸ್‌ನಲ್ಲಿ ಅತಿಥಿ ಅಧ್ಯಾಪಕ. ‘Sand to Silicon’ ಕೃತಿಯ ಲೇಖಕ. ಇದು ‘ಡಿಜಿಟಲ್ ಕ್ರಾಂತಿ ಮತ್ತು ಭಾರತ’ ಎಂದು ಕನ್ನಡಕ್ಕೆ ಅನುವಾದಗೊಂಡಿದೆ.

 --------------------